ಆಟೋರಾಜ ಈ ಹೆಸರು ಕೇಳಿದಾಗ ಕರಾಟೆ ಕಿಂಗ್, ನಟ ಶಂಕರ್ ನಾಗ್ ಅವರ ಹೆಸರು ಮೊದಲು ನೆನಪಾಗಲಿದೆ. ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ, ಸಹ ನಟರಾಗಿ, ನಿರ್ದೇಶಕನಾಗಿ, ನಿರ್ಮಾಪಕರಾಗಿದ್ದ ಇವರು ಅಪಾರ ಅಭಿಮಾನಿ ಬಳಗದ ಮನಗೆದ್ದಿದ್ದಾರೆ. ನಟ ಶಂಕರ್ ನಾಗ್ ಅವರು ಇಂದು ಬದುಕಿದ್ದರೆ ತಮ್ಮ 71ನೇ ಜನ್ಮ ದಿನಾಚರಣೆಯನ್ನು ಅಭಿಮಾನಿ ಗಳೊಂದಿಗೆ ಆಚರಿಸಬೇಕಿತ್ತು, ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದ ಅವರು ನಮ್ಮೊಂದಿಗೆ ಇಲ್ಲ ವಾಗಿದ್ದರೂ ನಟಿಸಿದ್ದ ಸಿನಿಮಾ ಮೂಲಕ ಚಿರಕಾಲ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿವಂಗತ ಶಂಕರ್ನಾಗ್ ಅವರು ನಟ ಮಾತ್ರವಲ್ಲದೆ ಚಿತ್ರಕಥೆಗಾರ, ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಂಕ್ರಣ್ಣನ ಹುಟ್ಟುಹಬ್ಬದ ನೆನಪಿನಲ್ಲಿ ಅವರ ಕುರಿತು ಕೆಲವು ವಿಷಯಗಳನ್ನು ನೆನಪಿಸಿಕೊಳ್ಳೋಣ
ಶಂಕರ್ನಾಗ್ ಜನನ
ಕನ್ನಡ ನಟ ದಿವಂಗತ ಶಂಕರ್ನಾಗ್ ಅವರು ನವೆಂಬರ್ 9, 1954 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಮಾತೃಭಾಷೆ ಕೊಂಕಣಿ ಯಾಗಿದ್ದರೂ ಮನೆಯಲ್ಲಿ ಎಲ್ಲರೂ ಕನ್ನಡ, ಮರಾಠಿ ಭಾಷೆಯನೇ ಮಾತನಾಡುತ್ತಿದ್ದರು.
ಶಂಕರ್ನಾಗ್ ವೃತ್ತಿಜೀವನದ ಆರಂಭ
ಶಂಕರ್ನಾಗ್ ಅವರು ತಮ್ಮ ವೃತ್ತಿಜೀವನ ಆರಂಭಿಸಿದ್ದು ಮರಾಠಿ ರಂಗಭೂಮಿಯಲ್ಲಿ. ಮರಾಠಿ ನಾಟಕ ಮಾಡುತ್ತ ಇವರು ಕಲಾರಾಧನೆ ಆರಂಭಿಸಿದರು.ಸರ್ವಕಾಶಿ ಎಂಬ ಮರಾಠಿ ಸಿನಿಮಾದಲ್ಲಿ ನಟನಾಗಿ ಅಭಿನಯಿಸಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮುಂಬೈನಲ್ಲಿ ಇವರು ತಮ್ಮ ಆರಂಭಿಕ ಕಲಾ ವೃತ್ತಿ ಆರಂಭಿಸಿದರು.
ಕನ್ನಡಕ್ಕೆ ಎಂಟ್ರಿ
ಗಿರೀಶ್ ಕಾರ್ನಾಡ್ರ ಒಂದಾನೊಂದು ಕಾಲದಲ್ಲಿ ಎಂಬ ಚಲನಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಇದೇ ಚಿತ್ರದಲ್ಲಿ ಅವರ ಅದ್ಭುತ ನಟನೆಗಾಗಿ `ರಾಷ್ಟ್ರ ಪ್ರಶಸ್ತಿ’ಯನ್ನು ಕೂಡ ಪಡೆದರು. ಕನ್ನಡದ ಜೊತೆಗೆ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ 90 ಚಿತ್ರಗಳಲ್ಲಿ ನಟಿಸಿದ್ದು ಕೆಲವು ಚಿತ್ರಗಳನ್ನು ಸ್ವತಃ ನಿರ್ಮಿಸಿದ್ದಾರೆ. ನಂತರದ್ದು ಇತಿಹಾಸ ಎಂದರೆ ತಪ್ಪಾಗಲಾರದು.
ಅಂತಾರಾಷ್ಟ್ರೀಯ ಪ್ರಶಸ್ತಿ
ಶಂಕರ್ನಾಗ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೆ ಇಂಟರ್ನ್ಯಾಷನಲ್ ಫಿಲ್ಮ್ಫೆಸ್ಟಿವಲ್ನಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿ ದೊರಕಿತು. ಮೊದಲ ಚಿತ್ರದಲ್ಲಿಯೇ ಅಂತಾರಾಷ್ಟ್ರೀಯ ಪ್ರಶಸ್ತಿ ತನ್ನದಾಗಿಸಿಕೊಂಡ ಮೇರು ನಟ ಇವರು.
ನಿರ್ದೇಶನಕ್ಕಿಳಿದ ಶಂಕರ್ನಾಗ್
ಮಿಂಚಿನ ಓಟ ಚಿತ್ರವು ಶಂಕರ್ನಾಗ್ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಂತಹ ಯಶಸ್ಸು ಪಡೆಯಲಿಲ್ಲ. ಆದರೆ, ಇದಕ್ಕೆ ಹಲವು ಪ್ರಶಸ್ತಿಗಳು ದೊರಕಿತು. ಏಳು ರಾಜ್ಯ ಪ್ರಶಸ್ತಿಯನ್ನು ಮಿಂಚಿನ ಓಟ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕನ್ನಡದಲ್ಲಿ `ಜನುಮ ಜನುಮದ ಅನುಬಂಧ’,`ಗೀತಾ’ ಚಿತ್ರ ಗಳನ್ನು ಮತ್ತು ಹಿಂದಿಯಲ್ಲಿ ವಿನೋದ್ ಮೆಹ್ರಾ ಅಭಿನಯದ `ಲಾಲಚ್’ ಚಿತ್ರವನ್ನು ಇವರೆ ನಿರ್ದೇಶಿಸಿದರು. `ಆಕ್ಸಿಡೆಂಟ್’ ಚಿತಗರಕ್ಕೆ 1984 ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಸ್ವಾಮಿ ಚಿತ್ರಕ್ಕಾಗಿ ಅತ್ಯುತ್ತಮ ಮಕ್ಕಳ ಚಿತ್ರದ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಡಾ.ರಾಜ್ ಕುಮಾರ್ ಅವರ ಒಂದು ಮುತ್ತಿನ ಕಥೆ ಸಿನಿಮಾಕ್ಕೆ ಇವರೇ ನಿರ್ದೇಶನ ಮಾಡಿದ್ದು ಸಾಗರಾಳದಲ್ಲಿ ಈ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಿಸಲಾಗಿದ್ದು ಈಗಲೂ ಆ ದೃಶ್ಯ ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿದೆ.
ಒಂದು ವರ್ಷ 14 ಸಿನಿಮಾ
1984ರ ವರ್ಷವು ಶಂಕರ್ನಾಗ್ ಪಾಲಿಗೆ ವಿಶೇಷ ವರ್ಷ. ಆ ಒಂದೇ ವರ್ಷದಲ್ಲಿ ಶಂಕರ್ನಾಗ್ ನಟಿಸಿದ 14 ಚಿತ್ರಗಳು ಬಿಡುಗಡೆಯಾಗಿದ್ದವು. ಈ ರೀತಿಯ ದಾಖಲೆಯನ್ನು ಕನ್ನಡ ಚಿತ್ರರಂಗದಲ್ಲಿ ಶಂಕರ್ನಾಗ್ ಬರೆದಿದ್ದರು. ಆ ಸಮಯದಲ್ಲಿ ಆಕ್ಸಿಡೆಂಟ್ ಚಿತ್ರ ಶಂಕರ್ನಾಗ್ ಜನಪ್ರಿಯತೆ ಹೆಚ್ಚಿಸಿತ್ತು.
ಮಾಲ್ಗುಡಿ ಡೇಸ್ ನೆನಪು
ಆರ್ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಯನ್ನು ಧಾರಾವಾಹಿಯಾಗಿ ನಿರ್ದೇಶಿಸಿದರು. ದೂರದರ್ಶನದಲ್ಲಿ ಇದು ಹೊಸ ದಾಖಲೆ ಬರೆಯಿತು.
ಶಂಕರ್ನಾಗ್ ಅವರ ಅದ್ಭುತ ದೂರದೃಷ್ಟಿ
ಶಂಕರ್ನಾಗ್ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು. ನಂದಿ ಬೆಟ್ಟಕ್ಕೆ ರೋಪ್ವೇ, ಮೆಟ್ರೋ, ಬೆಂಗಳೂರು ಟ್ರಾಫಿಕ್ ನಿರ್ವಹಣೆ ಇತ್ಯಾದಿ ಹಲವು ವಿಷಯಗಳ ಕುರಿತು ಆ ಸಮಯದಲ್ಲಿಯೇ ಶಂಕ್ರಣ್ಣ ಯೋಚಿಸಿದ್ದರು. ಈಗಿನ ಯುವ ತಲೆಮಾರಿಗೆ ಶಂಕ್ರಣ್ಣ ಸ್ಪೂರ್ತಿದಾಯಕ ವ್ಯಕ್ತಿತ್ವ ಎನ್ನಬಹುದು. ಒಟ್ಟಿನಲ್ಲಿ ಶಂಕರ್ ನಾಗ್ ಅವರ ಆಲೋಚನಾ ಶೈಲಿ, ಸಮಾಜ ಸುಧಾರಣೆ , ಸಿನಿಮಾ ಮೂಲಕ ಸಾಮಾಜಿಕ ಕಳಕಳಿ , ವೃತ್ತಿ ಜೀವನಗಳು ಅನೇಕರಿಗೆ ಸ್ಫೂರ್ತಿ ಎನ್ನಬಹುದು.
ದುರಂತ ಅಂತ್ಯ
ಶಂಕ್ರಣ್ಣ ಅವರ ಸಾವಿನ ಕುರಿತು ಇಂದಿಗೂ ವದಂತಿಗಳು, ಊಹಾಪೋಹಗಳು ಇವೆ. ಶಂಕರ್ನಾಗ್ ಅವರು ಸೆಪ್ಟೆಂಬರ್ 30, 1990ರಂದು ಕಾರು ಅಪಘಾತದಲ್ಲಿ ಮೃತಪಟ್ಟರು.
ಇಂದು ಆಟೋರಾಜ ಶಂಕರನಾಗ್ ಅವರ ಜನ್ಮದಿನ: ಕರಾಟೆ ಕಿಂಗ್ ಸಿನಿಮಾ ಜರ್ನಿ ಹೇಗಿತ್ತು ಗೊತ್ತಾ?
by

Leave a Comment