ವಾಸ್ತು ಶಾಸ್ತ್ರದ ಪ್ರಕಾರ ದಾಸವಾಳದ ಹೂವಿಗೆ ಅಪಾರ ಮಹತ್ವವಿದೆ. ದಾಸವಾಳವನ್ನು ಭಾಗ್ಯವನ್ನು ಆಕರ್ಷಿಸುವ ಹೂವೆಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಾಸ್ತು ಶಾಸ್ತ್ರದ ಸಲಹೆಯಂತೆ ಹೂವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಅದೃಷ್ಟದ ದ್ವಾರ ತೆರೆಯಬಹುದು. ವಿಶೇಷವಾಗಿ ದಾಸವಾಳ ಹೂವನ್ನು ಲಕ್ಷ್ಮೀ ದೇವಿಗೆ ಅರ್ಪಿಸಿದರೆ ಧನ ಹಾಗೂ ಸಂಪತ್ತಿನ ಹರಿವು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದಲ್ಲಿ ದಾಸವಾಳದ ಹೂವಿನ ಕುರಿತಾಗಿ ತಿಳಿಸಿರುವ ಈ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದರೆ ಆರ್ಥಿಕ ಸ್ಥಿತಿ ಮಾತ್ರವಲ್ಲದೆ ಜೀವನದ ದಿಕ್ಕೇ ಬದಲಾಗುವ ಸಾಧ್ಯತೆ ಇದೆ. ಹಣದ ಕೊರತೆ, ಜೀವನದಲ್ಲಿ ಆಗುತ್ತಿರುವ ಹಿನ್ನಡೆ, ಅಡೆತಡೆಗಳಿಂದ ಮುಕ್ತಿ ಪಡೆಯಲು ದಾಸವಾಳ ಹೂವು ಸಹಕಾರಿಯಾಗಿದ್ದು, ಮನೆಯ ಸಮೃದ್ಧಿ ಹೆಚ್ಚಾಗಲು ಅನುಸರಿಸಬೇಕಾದ ಪರಿಹಾರಗಳನ್ನು ಇಲ್ಲಿ ತಿಳಿದುಕೊಳ್ಳೋಣ.
ಅನೇಕರು ಎಷ್ಟೇ ದುಡ್ಡಿದ್ದರೂ, ಹಣ ಗಳಿಸಿದರು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಾರೆ. ಸಾಲದ ಹೊರೆಯಿಂದ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವವರು ದಾಸವಾಳದ ವಾಸ್ತು ಪರಿಹಾರವನ್ನು ಅನುಸರಿಸಬಹುದು. ಶುಕ್ರವಾರದಂದು ಗಣಪತಿ ಮತ್ತು ದುರ್ಗಾ ದೇವಿಯನ್ನು ಸ್ಮರಿಸಿ, ಮನೆಯಲ್ಲಿರುವ ಹಣ ಇಡುವ ಸ್ಥಳದಲ್ಲಿ ಐದು ದಾಸವಾಳ ಹೂಗಳನ್ನು ಇಡಬೇಕು. ಈ ವಿಧಾನವನ್ನು ನಿರಂತರವಾಗಿ ಕನಿಷ್ಠ ಏಳು ದಿನಗಳ ಕಾಲ ಪಾಲಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಕಾಲಕ್ರಮೇಣ ಸಾಲದ ಭಾರ ಕಡಿಮೆಯಾಗಿ, ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ಇದೆ.
ಮನೆಯಲ್ಲಿನ ಆರ್ಥಿಕ ಅಸ್ಥಿರತೆ ಅಥವಾ ಹಣಕಾಸಿನ ತೊಂದರೆ ನಿಮಗೆ ಕಾಡುತ್ತಿದ್ದರೆ, ಸೂರ್ಯ ದೇವರ ಆರಾಧನೆಯ ಮೂಲಕವೂ ಪರಿಹಾರ ದೊರಕಬಹುದು. ಪ್ರತಿದಿನ ಸೂರ್ಯನಿಗೆ ಅರ್ಘ್ಯ ನೀಡುವ ವೇಳೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ದಾಸವಾಳ ಹೂವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಪಿಸಬೇಕು. ಈ ವಿಧಾನವು ಹಣಕಾಸಿನ ಅಡಚಣೆಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗುತ್ತದೆ.
ಗಂಡ-ಹೆಂಡತಿಯ ನಡುವಿನ ಅನಗತ್ಯ ಜಗಳ, ಮುನಿಸು ಮತ್ತು ಮನಸ್ತಾಪಗಳು ದಾಂಪತ್ಯ ಜೀವನವನ್ನು ಹಾಳು ಮಾಡಬಹುದು. ಇಂತಹ ಸಮಸ್ಯೆಗಳಿಗೆ ದಾಸವಾಳ ಹೂವು ಉತ್ತಮ ಪರಿಹಾರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ದಾಸವಾಳ ಹೂವು ಪ್ರೀತಿಯ ಭಾವನೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ದಂಪತಿಗಳು ಮಲಗುವ ಸ್ಥಳದ ಬಳಿ ದಾಸವಾಳ ಹೂವನ್ನು ಇಟ್ಟುಕೊಂಡರೆ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚಾಗಿ, ಮುನಿಸು ದೂರವಾಗಿ ದಾಂಪತ್ಯ ಜೀವನ ಸುಖಮಯವಾಗುತ್ತದೆ.
ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆ ಹೆಚ್ಚಿಸಲು ದಾಸವಾಳ ಹೂವಿನ ಗಿಡವನ್ನು ನೆಡುವುದು ಶುಭಕರ. ಆದರೆ ಗಿಡವನ್ನು ಇಡುವ ದಿಕ್ಕು ಮುಖ್ಯವಾಗುತ್ತದೆ. ಮನೆಗಿನ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ದಾಸವಾಳ ಗಿಡವನ್ನು ಇಟ್ಟರೆ ಧನಾತ್ಮಕ ಶಕ್ತಿ ಹರಿದು ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಆದರೆ ಗಿಡ ಯಾವತ್ತೂ ಒಣಗದಂತೆ ನೋಡಿಕೊಳ್ಳುವುದು ಬಹಳ ಅಗತ್ಯ.
ಉದ್ಯೋಗದಲ್ಲಿ ಪ್ರಗತಿ ಕಾಣದೆ ಇದ್ದರೆ ಅಥವಾ ವ್ಯಾಪಾರದಲ್ಲಿ ನಷ್ಟ ಎದುರಿಸುತ್ತಿದ್ದರೆ, ದಾಸವಾಳದ ಮೂಲಕ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಬಹುದು. ಸಕ್ಕರೆ ಮಿಠಾಯಿ ಜೊತೆಗೆ ದಾಸವಾಳ ಹೂವನ್ನು ಲಕ್ಷ್ಮೀ ದೇವಿಗೆ ಅರ್ಪಿಸುವುದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು. ಇದರಿಂದ ಉದ್ಯೋಗದಲ್ಲಿ ಯಶಸ್ಸು ಮತ್ತು ವ್ಯಾಪಾರದಲ್ಲಿ ವೃದ್ಧಿ ಸಾಧ್ಯವೆಂದು ಶಾಸ್ತ್ರಗಳು ಸೂಚಿಸುತ್ತವೆ.

Leave a Comment