---Advertisement---

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ?  ಹಾಗಾದ್ರೆ ತಪ್ಪದೆ ಈ ವಾಸ್ತು ನಿಯಮ ಪಾಲಿಸಿ. ಮಣ್ಣಿನ ಮಡಿಕೆಯ ಸರಿಯಾದ ಉಪಯೋಗ ಮತ್ತು ಮಾಹಿತಿ.

By Chandan Naik

January 17, 2026 5:17 AM

---Advertisement---

ಒಂದು ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಮಣ್ಣಿನ ಪಾತ್ರೆ ಗಳಿರುತ್ತಿದ್ದವು. ಅನ್ನ, ಸಾರು ಸೇರಿದಂತೆ ಎಲ್ಲವೂ ಅದರಲ್ಲೇ ತಯಾರಾಗುತ್ತಿತ್ತು. ಮಣ್ಣಿನ ಮಡಕೆಗಳಂತೂ ಫ್ರಿಡ್ಜ್‌ನಂತೆ ನೀರನ್ನು ತಣ್ಣಗಿಟ್ಟು, ಬಿಸಿಲಲ್ಲಿ ದಣಿದು ಬಂದ ಮನೆಯ ಸದಸ್ಯರ ದಾಹ ನೀಗುತ್ತಿದ್ದವು. ಮಣ್ಣಿನ ಮಡಕೆಯಲ್ಲಿ ಮಾಡಿಟ್ಟ ಅಡುಗೆ ಹೆಚ್ಚು ಆರೋಗ್ಯ ಲಾಭಗಳನ್ನು ತಂದುಕೊಡುತ್ತಿತ್ತು. ಆದರೀಗಿನ  ತಂತ್ರಜ್ಞಾನಗಳ ನಡುವೆ ಮಣ್ಣಿನ ಮಡಕೆಗಳು ಕಣ್ಮರೆಯಾಗುತ್ತಿವೆ. ಅತಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ. ಆದರೆ ನಿಮಗೆ ಗೊತ್ತೇ? ವಾಸ್ತು ವಿಜ್ಞಾನದ ಪ್ರಕಾರ ಮಣ್ಣಿನಿಂದ ಮಾಡಿದ ಕೆಲ ವಸ್ತುಗಳನ್ನು ನಿಯಮಗಳ ಪ್ರಕಾರ ಮನೆಯಲ್ಲಿ ಬಳಸಿದರೆ, ಹಣದ ಸಮಸ್ಯೆ ಪರಿಹಾರ ಕಾಣುತ್ತದೆ. ಕೈಗೊಂಡ ಕಾರ್ಯಗಳಿಗೆ ಯಶಸ್ಸು ಸಿಗುತ್ತದೆ.

ಹೌದು, ಮಣ್ಣಿನ ಮಡಕೆಗಳು ನೆಲದೊಂದಿಗೆ ಸಂಬಂಧ ಇಟ್ಟುಕೊಂಡವುಗಳು. ವಾಸ್ತು ಕೂಡಾ ಪಂಚಭೂತಗಳೊಂದಿಗೆ ಸಂಬಂಧ ಹೊಂದಿರುವುದು. ಹಾಗಾಗಿ, ಮಣ್ಣಿನ ಮಡಕೆಗಳ ಸರಿಯಾದ ಬಳಕೆಯು ವಾಸ್ತು ದೋಷಗಳನ್ನು ಹೋಗಲಾಡಿಸುವುದು ಅಚ್ಚರಿಯೇನಲ್ಲ.

ಹಾಗಾದರೆ ಬನ್ನಿ ವಾಸ್ತು ಶಾಸ್ತ್ರದಲ್ಲಿ ಮಣ್ಣಿನ ಮಡಿಕೆ ಕುರಿತಾಗಿ ಏನೆಲ್ಲ ನಿಯಮಗಳನ್ನು ವಿವರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ:

ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಸರಿಯಾದ ಸ್ಥಳದಲ್ಲಿ ಮಾಡುವುದು ಬಹಳ ಮುಖ್ಯ. ನೀರಿನ ಪಾತ್ರೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ, ಸಕಾರಾತ್ಮಕ ಶಕ್ತಿಯ ಬದಲು ನಕಾರಾತ್ಮಕತೆ ಪ್ರವೇಶಿಸುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಅಡುಗೆ ಮಾಡಲೂ, ನೀರು ಕುಡಿಯಲೂ ಮಣ್ಣಿನ ಪಾತ್ರೆಯನ್ನೇ ಬಳಸಲಾಗುತ್ತಿತ್ತು. ಮಣ್ಣು ಮಂಗಳ ಗ್ರಹದ ಸಂಕೇತವಾಗಿದ್ದು, ಸಂತೋಷ, ಭಾಗ್ಯ ಮತ್ತು ಸಮೃದ್ಧಿಯ ಪ್ರತೀಕವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮನೆಯಲ್ಲಿ ಮಣ್ಣಿನ ಮಡಕೆ ಇರಿಸುವುದು ಸುಖ, ಸಂಪತ್ತು ಮತ್ತು ಐಶ್ವರ್ಯವನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ.

ಮಣ್ಣಿನ ಪಾತ್ರೆಯ ನೀರನ್ನು ಸೇವಿಸುವುದರಿಂದ ಧೈರ್ಯ, ಶಕ್ತಿ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಹೂಜಿಯ ನೀರು ಬುಧ ಮತ್ತು ಚಂದ್ರನ ಪ್ರಭಾವಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ಮನೆಯಲ್ಲೆಲ್ಲ ಹರ್ಷ ಮತ್ತು ಸಮೃದ್ಧಿ ನೆಲೆಸುತ್ತದೆ.

ವಾಸ್ತು ಪ್ರಕಾರ ಮಣ್ಣಿನ ಮಡಕೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಉತ್ತಮ. ಇದರಿಂದ ಮನೆ ತುಂಬಾ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಜತೆಗೆ ಮನೆಯ ಛಾವಣಿ ಅಥವಾ ಆವರಣದಲ್ಲಿ ಹಕ್ಕಿಗಳಿಗೆ ಮಣ್ಣಿನ ಪಾತ್ರೆಯಲ್ಲಿ ನೀರು ಅಥವಾ ಆಹಾರ ಇಡುವುದರಿಂದ ಆರ್ಥಿಕ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಹಣಕಾಸಿನ ಸ್ಥಿತಿ ಬಲವಾಗುತ್ತದೆ. ಇಂತಹ ಸೇವೆಯಿಂದ ದೇವಾನುಗ್ರಹವೂ ಲಭಿಸುತ್ತದೆ ಎನ್ನಲಾಗುತ್ತದೆ.

ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ನೀರಿನ ಮಡಕೆಯನ್ನು ಇಡುವುದು ವಾಸ್ತು ಪ್ರಕಾರ ತೊಂದರೆ ಒಡ್ಡುತ್ತದೆ. ನೈಋತ್ಯ ದಿಕ್ಕು ಭೂತ ತತ್ವಕ್ಕೆ ಸೇರಿದುದರಿಂದ ಅಲ್ಲಿ ನೀರು ಇರಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ನೀರಿನ ಪಾತ್ರೆ ಇಟ್ಟರೆ ಆರೋಗ್ಯ ಸಮಸ್ಯೆಗಳು ಮತ್ತು ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಬಹುದು ಎಂಬ ನಂಬಿಕೆ ಇದೆ.

ನೀವು ಮನೆಗೆ ಹೊಸ ಮಡಕೆಯನ್ನು ತಂದಿದ್ದರೆ .. ವಿನ್ಯಾಸದ ಪ್ರಕಾರ ಅದನ್ನು ಸರಿಯಾದ ದಿಕ್ಕಿನಲ್ಲಿ ಜೋಡಿಸಿ. ಉತ್ತರ ಭಾಗವು ಕುಬೇರನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಮಣ್ಣಿನ ಮಡಕೆಯನ್ನು ಉತ್ತರ ಭಾಗದಲ್ಲಿ ಇಡಲು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ. ಕುಬೇರನ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ. ಉತ್ತರ ದಿಕ್ಕು ನೀರನ್ನು ಇಡಲು ಯಾವಾಗಲೂ ಪ್ರಶಸ್ತ ಸ್ಥಳ. ಅಲ್ಲದೆ, ಕಿವುಡುತನ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದೆ. 

ಇನ್ನು ನೀರು ತುಂಬಿದ ಮಣ್ಣಿನ ಮಡಕೆಯ ಮುಂದೆ ಪ್ರತಿದಿನ ಒಂದು ದೀಪವನ್ನು ಬೆಳಗಿಸಿದರೆ ಲಕ್ಷ್ಮೀ ಕೃಪೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಯಾರ ಮನೆಯಲ್ಲಿ ಪದೇ ಪದೆ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತಿವೆಯೋ, ಸಂಪತ್ತಿನ ಸ್ಥಿರತೆ ಇಲ್ಲವೋ, ಅಂಥವರು ಪ್ರತಿದಿನ ಹೂಜಿಯ ಮುಂದೆ ದೀಪ ಹಚ್ಚುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment