Sathish Ninasam Ayogya 2 controversy: 2026ರ ಅರ್ಧ ವರ್ಷ ಕಳೆಯುತ್ತಾ ಬಂದರೂ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಅಷ್ಟಾಗಿ ಒಲಿದಿಲ್ಲ. ಬಾಕ್ಸಾಫೀಸ್ನಲ್ಲಿ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿದ್ದು ಬಿಟ್ಟರೆ, ಉಳಿದ ಬಹುತೇಕ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಇದರಿಂದ ನಿರ್ಮಾಪಕರು ನೂರಾರು ಕೋಟಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ನಟ ಸತೀಶ್ ನೀನಾಸಂ ಕೊಟ್ಟ ಒಂದು ಹೇಳಿಕೆ ನಿರ್ಮಾಪಕರನ್ನು ಕೆರಳಿಸಿ, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸತೀಶ್, ತಕ್ಷಣವೇ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
Sathish Ninasam Ayogya 2 controversy: ವಿವಾದ ಸೃಷ್ಟಿಸಿದ ‘ಅಯೋಗ್ಯ 2’ ಪ್ರಚಾರದ ಮಾತು
ಸತೀಶ್ ನೀನಾಸಂ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಅಯೋಗ್ಯ 2’ ಚಿತ್ರದ ಪ್ರಚಾರದ ವೇಳೆ ಸತೀಶ್, “ಸಿನಿಮಾ ಮಾಡಲು ಬರುವ ನಿರ್ಮಾಪಕರು ಎಜುಕೇಟೆಡ್ ಆಗಿರಬೇಕು” ಎಂದು ಹೇಳಿದ್ದರು. ಈ ಮಾತು ನಿರ್ಮಾಪಕರ ಸಂಘದಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು. ವಿಷಯ ದೊಡ್ಡದಾಗುತ್ತಿದ್ದಂತೆ ನಿರ್ಮಾಪಕರ ಸಂಘದಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಈ ಸಭೆಗೆ ಹಾಜರಾದ ಸತೀಶ್ ನೀನಾಸಂ, ತಮ್ಮ ಮಾತಿನ ಹಿಂದಿನ ಅಸಲಿ ಉದ್ದೇಶವನ್ನು ಬಿಚ್ಚಿಟ್ಟು ಸ್ಪಷ್ಟನೆ ನೀಡಿದ್ದಾರೆ.
Sathish Ninasam Ayogya 2 controversy: ನನ್ನ ಹಿನ್ನೆಲೆಯೂ ಸಾಧಾರಣ, ಯಾರನ್ನೂ ಹೀಯಾಳಿಸಿಲ್ಲ
ಸಭೆಯಲ್ಲಿ ಮಾತನಾಡಿದ ಸತೀಶ್, “ನಮ್ಮ ಅಯೋಗ್ಯ 2 ಸಿನಿಮಾ ಪ್ರಿ-ಪೋನ್ ಆಗಿದೆ. ಪ್ರಸ್ತುತ ಚಿತ್ರರಂಗ ಇರುವ ಕಠಿಣ ಪರಿಸ್ಥಿತಿಯನ್ನು ನೋಡಿಯೇ ನಾನು ಆ ಪದ ಬಳಸಿದ್ದೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಮುಕ್ತವಾಗಿ ಕ್ಷಮೆ ಕೇಳುತ್ತೇನೆ. ನಾನು ಓದಿರುವುದು ಕೇವಲ SSLC ಮಾತ್ರ, ನಮ್ಮ ತಾಯಿ ಓದಿಯೇ ಇಲ್ಲ. ಹಾಗಿರುವಾಗ ನಾನು ಯಾರನ್ನೂ ಹೀಯಾಳಿಸಲು ಸಾಧ್ಯವೇ ಇಲ್ಲ. ಹಳ್ಳಿಯಿಂದ ಬಂದು ದಿನಕ್ಕೆ 200-300 ರೂಪಾಯಿಗೆ ಸೀರಿಯಲ್ ಮಾಡಿಕೊಂಡು ಚಿತ್ರರಂಗಕ್ಕೆ ಬಂದವನು ನಾನು. ಪಾರ್ವತಮ್ಮ ರಾಜ್ಕುಮಾರ್, ಅಣ್ಣಾವ್ರ ಕಾಲದಿಂದಲೂ ನಿರ್ಮಾಪಕರು ಈ ಇಂಡಸ್ಟ್ರಿಯನ್ನು ಕಷ್ಟಪಟ್ಟು ಕಟ್ಟಿದ್ದಾರೆ” ಎಂದರು.
Sathish Ninasam Ayogya 2 controversy: ವಿದ್ಯಾರ್ಹತೆಯಲ್ಲ, ನಾನು ಹೇಳಿದ್ದು ‘ಸಿನಿಮಾ ಜ್ಞಾನ’
ಮುಂದುವರಿದು ಮಾತನಾಡಿದ ಅವರು, “ನಾನು ಎಜುಕೇಶನ್ ಎಂದು ಹೇಳಿದ್ದು ಶಾಲಾ ಓದಿನ ಬಗ್ಗೆ ಅಲ್ಲ, ಸಿನಿಮಾದ ಜ್ಞಾನದ ಬಗ್ಗೆ. ಒಂದು ಕೋಟಿ ಬಜೆಟ್ನ ಸಿನಿಮಾ ಎರಡು ಕೋಟಿ ಆದಾಗ ನಿರ್ಮಾಪಕರಿಗೆ ಅದರ ಜ್ಞಾನವಿದ್ದರೆ ಪ್ರಶ್ನೆ ಮಾಡಬಹುದು. ಆಗ ನಿರ್ಮಾಪಕರೂ ಉಳಿಯುತ್ತಾರೆ, ಚಿತ್ರರಂಗವೂ ಉಳಿಯುತ್ತದೆ. ಬಂದ ಹೊಸ ನಿರ್ಮಾಪಕರು ನಷ್ಟ ಮಾಡಿಕೊಂಡು ಆಚೆ ಹೋದರೆ ನಮಗೂ ನೋವಾಗುತ್ತದೆ. ಅವರು ಕೇವಲ ಒಂದು ಸಿನಿಮಾ ಮಾಡದೇ ನೂರಾರು ಸಿನಿಮಾ ಮಾಡಬೇಕು, ಇಲ್ಲಿ ಲಕ್ಷಾಂತರ ಜನರ ಬದುಕಿದೆ ಎಂಬ ಕಾಳಜಿಯಿಂದ ಆ ಮಾತು ಹೇಳಿದ್ದೆ ಅಷ್ಟೇ. ಆದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ, ಇದರಿಂದ ನಾನೇನು ಚಿಕ್ಕವನಾಗುವುದಿಲ್ಲ” ಎಂದು ಸತೀಶ್ ನೀನಾಸಂ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಸತೀಶ್ ಅವರ ಈ ಮುಕ್ತ ಮತ್ತು ನೇರ ಸ್ಪಷ್ಟನೆಯ ನಂತರ ನಿರ್ಮಾಪಕರ ವಲಯದಲ್ಲಿದ್ದ ಮುನಿಸು ಸದ್ಯಕ್ಕೆ ತಣ್ಣಗಾದಂತಿದೆ.
Leave a Comment